ರಾಹುಲ್ vs ಮೋದಿ: ಭಾರತ ಶರಣಾಗತಿ, ರೈತ ಬಿರುಗಾಳಿ ಎಂದ ಗುಡುಗು
ಇಂದು ಲೋಕಸಭೆಯಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಇತ್ತೀಚೆಗೆ ಅಮೆರಿಕದೊಂದಿಗೆ ಅಂತಿಮಗೊಳಿಸಿದ ವ್ಯಾಪಾರ ಒಪ್ಪಂದದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಮೇಲೆ ವಾಗ್ದಾಳಿ ಮಾಡಿದರು. ಭಾರತದ ಕೃಷಿ ಮತ್ತು ಡೈರಿ ಮಾರುಕಟ್ಟೆಗಳನ್ನು ಅಮೆರಿಕದ ಕೃಷಿ ಉತ್ಪನ್ನಗಳಿಗೆ ತೆರೆಯಲು ಒಪ್ಪುವ ಮೂಲಕ ಮೋದಿ ಸರ್ಕಾರ ಭಾರತ ಮಾತೆಯನ್ನು ಮಾರಾಟ ಮಾಡಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ನವದೆಹಲಿ, ಫೆಬ್ರವರಿ 11: ಅಮೆರಿಕದೊಂದಿಗಿನ ವ್ಯಾಪಾರ ಮತ್ತು ಸುಂಕ ಒಪ್ಪಂದದ ಬಗ್ಗೆ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಇಂದು ಲೋಕಸಭೆಯಲ್ಲಿ ಮೋದಿ ಸರ್ಕಾರವನ್ನು ಟೀಕಿಸಿದ್ದಾರೆ. ಕೃಷಿ ಮತ್ತು ಡೈರಿ ಮಾರುಕಟ್ಟೆಗಳನ್ನು ಅಮೆರಿಕದ ಕೃಷಿ ಉತ್ಪನ್ನಗಳಿಗೆ ತೆರೆಯಲು ಒಪ್ಪುವ ಮೂಲಕ ಕೇಂದ್ರ ಸರ್ಕಾರ “ಭಾರತ ಮಾತೆಯನ್ನು ಮಾರಾಟ ಮಾಡಿದೆ. ಇದಕ್ಕೆ ಮೋದಿ ಸರ್ಕಾರ ನಾಚಿಕೆಪಡಬೇಕು” ಎಂದು ರಾಹುಲ್ ಗಾಂಧಿ ಗುಡುಗಿದ್ದಾರೆ. ಯುಎಸ್ ಸುಂಕಗಳು 2025ರ ಮೊದಲು ಸರಾಸರಿ ಶೇ. 3 ಇದ್ದುದು ಈ ತಿಂಗಳ ಒಪ್ಪಂದದ ಅಡಿಯಲ್ಲಿ ಶೇ. 18ಕ್ಕೆ ಏರಿದೆ ಎಂದು ರಾಹುಲ್ ಗಾಂಧಿ (Rahul Gandhi) ಆರೋಪಿಸಿದ್ದಾರೆ.
ಅಮೆರಿಕದ ಸರಕುಗಳನ್ನು ಭಾರತದೊಳಗೆ ಪ್ರವೇಶಿಸಲು ಅನುಮತಿಸುವ ಮೂಲಕ ಭಾರತ-ಯುಎಸ್ ವ್ಯಾಪಾರ ಒಪ್ಪಂದವು ಕೋಟ್ಯಂತರ ರೈತರ, ವಿಶೇಷವಾಗಿ ಸಣ್ಣ ಅಥವಾ ಕನಿಷ್ಠ ಹಿಡುವಳಿಗಳನ್ನು ಹೊಂದಿರುವವರ ಜೀವನೋಪಾಯವನ್ನು ಅಪಾಯಕ್ಕೆ ಸಿಲುಕಿಸಿದೆ ಎಂದು ಲೋಕಸಭೆಯಲ್ಲಿ ರಾಹುಲ್ ಗಾಂಧಿ ಟೀಕಿಸಿದ್ದಾರೆ.
“ನೀವು ಭಾರತವನ್ನು ಮಾರಾಟ ಮಾಡಿದ್ದೀರಿ. ಭಾರತವನ್ನು ಮಾರಾಟ ಮಾಡಲು ನಿಮಗೆ ನಾಚಿಕೆಯಾಗುವುದಿಲ್ಲವೇ? ಭಾರತದ ಇತಿಹಾಸದಲ್ಲಿ ಮೊದಲ ಬಾರಿಗೆ ನಮ್ಮ ರೈತರು ಬಿರುಗಾಳಿಯನ್ನು ಎದುರಿಸುತ್ತಿದ್ದಾರೆ. ನೀವು ನಮ್ಮ ಬಡ ರೈತರನ್ನು ಹತ್ತಿಕ್ಕಲು ಬಾಗಿಲು ತೆರೆದಿದ್ದೀರಿ. ಈ ಹಿಂದೆ ಯಾವುದೇ ಪ್ರಧಾನಿ ಎಂದಿಗೂ ಈ ರೀತಿ ಮಾಡಿಲ್ಲ” ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
“ಇದು ಸಂಪೂರ್ಣ ಶರಣಾಗತಿ. ದುರಂತವೆಂದರೆ ಇದು ಪ್ರಧಾನಿಯೊಬ್ಬರ ಶರಣಾಗತಿಯಲ್ಲ. ಅವರು 1.5 ಬಿಲಿಯನ್ ಭಾರತೀಯರ ಭವಿಷ್ಯವನ್ನು ಶರಣಾಗಿಸಿದ್ದಾರೆ” ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.














Comments